ಮಂಗಳೂರು: ಮಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರನ್ನು 5 ಮೀಟರ್ ಎತ್ತರಕ್ಕೆ ನಿಲ್ಲಿಸುವುದಕ್ಕೇ ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಒತ್ತಾಯಿಸಿದರು. ಅವರು ಇಂದು ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಒತ್ತಾಯ ಮಾಡಿದರು. ಆದರೆ ಇದರಲ್ಲಿ 4 ಮೀಟರ್ ಎತ್ತರಕ್ಕೆ ಮಾತ್ರ ನೀರು ನಿಲ್ಲಿಸಬಹುದಾಗಿದೆ.4 ಮೀಟರ್ ಗಿಂತ ಜಾಸ್ತಿ ನೀರು ನಿಲ್ಲಿಸಬೇಕಾಗಿದ್ದಲ್ಲಿ ನದಿ ಇಕ್ಕೆಲ್ಲಗಳಲ್ಲಿರುವ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಮಂಗಳೂರಿಗೆ ಕುಡಿಯುವ ನೀರಿನ ಅಭಾವ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ತುಂಬೆ ವೆಂಟೆಡ್ ಡ್ಯಾಮನ್ನು 5 ಮೀಟರ್ ತನಕ ನೀರು ನಿಲ್ಲಿಸಲು ಈಗಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪಂಪ್ ವೆಲ್ ಬಸ್ ಸ್ಟ್ಯಾಂಡ್ ನಿರ್ಮಾಣ ಮಾಡುವ ಬಗ್ಗೆಯೂ ಶಾಸಕ ಜೆ.ಆರ್.ಲೋಬೊ ಗಮನ ಸೆಳೆದರು. ಈಗಾಗಲೇ ಬಸ್ ಗಳ ಓಡಾಟ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಬಸ್ ನಿಲ್ದಾಣವನ್ನು ಪಂಪ್ ವೆಲ್ ನಲ್ಲಿ ನಿರ್ಮಿಸುವ ಕುರಿತು ವಿಷಯ ಮಂಡಿಸಿದರು.

ಶಾಸಕರು ಅಂಗನವಾಡಿಗಳ ಮತ್ತು ಶಾಲಾ ಅಭಿವೃದ್ಧಿಯ ಬಗ್ಗೆಯೂ ಪ್ರಸ್ತಾಪಿಸಿದರು. ಮರಳು ಸಾಗಾಟದ ಬಗ್ಗೆ ಉಂಟಾಗಿರುವ ವಿವಾದವನ್ನು ಬಗೆಹರಿಸುವಂತೆಯೂ ಒತ್ತಾಯಿಸಿದರು.
ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಹಿದ್ದೀನ್ ಬಾವಾ ,ಕೋಟ ಶೀನಿವಾಸ ಪೂಜಾರಿ, ಕೆ.ಅಭಯ ಚಂದ್ರ ಜೈನ್, ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮೀನಾಕ್ಷಿ ಶಾಂತಿಗೋಡು ಮತ್ತಿತರರಿದ್ದರು.