ಮಂಗಳೂರು: ಕಣ್ಣೂರು ನಡುಪಳ್ಳಿ ದರ್ಗಾದ ತಡೆಗೋಡೆ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ಕಾಮಗಾರಿಗೆ ಶಾಸಕ ಜೆ.ಆರ್.ಲೋಬೊ ಅವರು ನಿನ್ನೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಮಾರು 400 ವರ್ಷ ಇತಿಹಾಸವಿರುವ ನಡುಪಳ್ಳಿ ದರ್ಗಾದ ಪುನರುಜ್ಜೀವನಕ್ಕೆ ಅಗತ್ಯವಾದ ಕ್ರಮ ತೆಗೆದುಕೊಂಡು ಇದರ ಇತಿಹಾಸವನ್ನು ಕಾಪಾಡಬೇಕು ಎಂದು ಹೇಳಿದರು.

ಈ ದರ್ಗಾದ ವೈಶಿಷ್ಠ್ಯವೇನೆಂದರೆ ನದಿಯ ಮಧ್ಯೆ ಇದ್ದು ನೀರಿನ ಹರಿವಿನಿಂದ ಇದು ದ್ವೀಪವಾಗಿ ನಿರ್ಮಾಣಗೊಂಡು ವರ್ಷದೊಂದ ವರ್ಷಕ್ಕೆ ಇದರ ಮಣ್ಣು ಕುಸಿಯುತ್ತಿತು. ಈಗ ಅದಕ್ಕೆ ತಡೆಗೋಡೆ ನಿರ್ಮಿಸುವ ಮೂಲಕ ದರ್ಗಾದ ನಿವೇಶನ ಮುಂದೆ ಮತ್ತಷ್ಟು ಕುಸಿಯದಂತೆ ಮಾಡಲಾಗುತ್ತಿದೆ.

ದರ್ಗಾವನ್ನು ಉಳಿಸಲು ಸ್ಥಳೀಯರು ಶಾಸಕ ಜೆ.ಆರ್.ಲೋಬೊ ಅವರಿಗೆ ಮನವಿ ಸಲ್ಲಿಸಿದರು. ಸಣ್ಣ ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿದ ಶಾಸಕರು ಅದಕ್ಕೆ ತಡೆಗೋಡೆ ನಿರ್ಮಿಸಲು 1 ಕೋಟಿ ರೂಪಾಯಿ ಮಂಜೂರು ಮಾಡಿಸಿದರು.

ಈ ಸಂದರ್ಭದಲ್ಲಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಇಕ್ಬಾಲ್, ಕೆಸಿಡಿಸಿ ಸದಸ್ಯರಾದ ಹಮೀದ್ ಕಣ್ಣೂರು, ಕಾಂಗ್ರೆಸ್ ವಾರ್ಡ್ ಅಧ್ಯಕ್ಷರಾದ ರಫಿಕ್ ಕಣ್ಣೂರು, ಕಾಂಗ್ರೆಸ್ ಮುಖಂಡ ಉಮ್ಮರಬ್ಬ, ಮಹಮ್ಮದ್ ಹಾಜಿ ಡಿ.ಎಂ, ಶರೀಫ್ ಐಮೋನು, ಅಬೂಬಕರ್, ಟಿ.ಅಬ್ದುಲ್ ಖಾದರ್, ಹುಸೈನ್ ಕುಂದಾಳ, ಕೆ ಎಸ್ ಆರ್ ಟಿ ಸಿ ನಿರ್ದೇಶಕ ಟಿ.ಕೆ.ಸುಧೀರ್ ಮುಂತಾದವರು ಉಪಸ್ಥಿತರಿದ್ದರು.