ಮಂಗಳೂರು: ಪಡಿತರ ವ್ಯವಸ್ಥೆ ಜನ ಸಾಮಾನ್ಯರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದ ಸೌಲಭ್ಯವನ್ನು ಜನಸಾಮಾನ್ಯರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಅವರು ಕಂದಾಯ ಅಧಿಕಾರಿಗಳು ಮತ್ತು ಆಹಾರ ಇಲಾಖೆ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸರ್ಕಾರ ಜನಸಾಮಾನ್ಯರಿಗೆ ಸೌಲಭ್ಯಗಳು ಸಿಗುವಂತೆ ಕೆಲಸ ಮಾಡುತ್ತಿದೆ. ಇದನ್ನು ಅಧಿಕಾರಿಗಳು ಚಾಚುತಪ್ಪದೆ ಪಾಲಿಸಬೇಕು. ಎಲ್ಲಿ ಜನರಿಗೆ ಪಡಿತರ ವ್ಯವಸ್ಥೆ ಆಗಿಲ್ಲ ಅಲ್ಲಿಗೆ ಭೇಟಿ ನೀಡಿ ಯಾವ ಕಾರಣಕ್ಕೆ ಅವರಿಗೆ ಪಡಿತರ ಸಿಕ್ಕಿಲ್ಲ ಎನ್ನುವುದನ್ನು ಪರಿಶೀಲಿಸಿ ಸೂಕ್ತ ತಿಳುವಳಿಕೆ ನೀಡಿ ಅವರಿಗೆ ಸೌಲಭ್ಯಗಳು ಸಿಗವಂತೆ ಮಾಡಬೇಕು ಎಂದರು.

ಶಕ್ತಿನಗರದಲ್ಲಿ ಪಡಿತರ ಅಂಗಡಿ ಮುಚ್ಚಲಾಗಿದೆ. ಇದರಿಂದ ಜನರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಅಲ್ಲಿ ನ್ಯಾಯಬೆಲೆ ಅಂಗಡಿ ಮತ್ತೆ ಕಾರ್ಯಾರಂಭಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಕೆಲವು ಜನರಿಗೆ ಪಡಿತರ ಚೀಟಿ ನೀಡಲಾಗಿಲ್ಲ. ಅವರಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಯಾವುದೇ ಕಾರಣಕ್ಕೂ ವಿಳಂಭವಾಗದಂತೆ ಕಂದಾಯ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

94 ಸಿಸಿಯ ಸರ್ವೇ ಕೆಲಸಗಳ ವಿವರ ಪಡೆದ ಅವರು ಇನ್ನೊಂದು ವಾರದೊಳಗೆ 94 ಸಿಸಿಯ ಸರ್ವೇ ಕಾರ್ಯವನ್ನು ಮುಗಿಸಿ ಅವರಿಗೆ ಹಕ್ಕು ಪತ್ರ ಕೊಡಲು ಕ್ರಮ ತೆಗೆದುಕೊಳ್ಳುವಂತೂ ಅರ್ ಐ ಗಳಿಗೆ ಜೆ.ಆರ್.ಲೋಬೊ ಅವರು ತಾಕೀತು ಮಾಡಿದರು. ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಶಾಸಕರಿಗೆ 94 ಸಿಸಿ ಸರ್ವೇ ಕೆಲಸ ಆಗಿರುವ ಬಗ್ಗೆ ವಿವರಿಗೆ ಬಾಕಿ ಉಳಿದ ಬಗ್ಗೆಯೂ ವಿವರ ನೀಡಿದರು.